ವಾಮಾಚಾರ ಪ್ರಯೋಗದ (ಬ್ಲಾಕ್ಮ್ಯಾಜಿಕ್) ಬಗ್ಗೆ ಕಥೆ ಇರುವ ಕೆಲವೇ ಸಿನಿಮಾಗಳು ಬಂದುಹೋಗಿವೆ. ಆದರೆ ಅದೆಲ್ಲಕ್ಕಿಂತಲೂ ಘೋರವಾದ ಮಾಟ ಮಂತ್ರ ಪ್ರಯೋಗವಾದ ಸಕೂಚಿಯ ಬಗ್ಗೆ ಮೊಟ್ಟ ಮೊದಲ ಬಾರಿಗೆ ಬೆಳ್ಳಿತೆರೆಯಮೇಲೆ ಹೇಳುವ ಪ್ರಯತ್ನವನ್ನು ನಿರ್ದೇಶಕ ಅಶೋಕ್ ಚಕ್ರವರ್ತಿ ಅವರು ಮಾಡಿದ್ದಾರೆ.
ಇದೇ ಹೆಸರಿನಲ್ಲಿ ಈವಾರ ತೆರೆಕಂಡಿರುವ ಈ ಚಿತ್ರದಲ್ಲಿ ತಪ್ಪಿಸಿಕೊಳ್ಳಲಿಕ್ಕೇ ಆಗದಂಥ ಘೋರ ಸಕೂಚಿ ವಾಮಾಚಾರಕ್ಕೆ ಬಲಿಯಾದ ಯುವತಿಯೊಬ್ಬಳನ್ನು ಸಾವಿನಂಚಿನಿಂದ ಕಾಪಾಡಿದ ಶಿವಶಕ್ತಿ ಆರಾಧಕನಾದ ಮಂತ್ರವಾದಿಯೊಬ್ಬನ ಕಥೆಯನ್ನು ಹೇಳಲಾಗಿದೆ. ಬ್ಲಾಕ್ಮ್ಯಾಜಿಕ್ ಕಥೆಗೆ ಒಂದಷ್ಟು ಕಮರ್ಷಿಯಲ್ ಟಚ್ ಕೊಟ್ಟು ಹೇಳಲಾಗಿದೆ. ಇದರಲ್ಲಿ ನಾಯಕಿ ಹೇಗೆ ಸಕೂಚಿಗೆ ಒಳಗಾಗುತ್ತಾಳೆ,ಮಾಡಿಸಿದವರು ಯಾರು ಮತ್ತು ಆಕೆಯನ್ನು ನಾಯಕ ಯಾವರೀತಿ ಕಾಪಾಡುತ್ತಾನೆ ಎಂಬುದನ್ನು ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ತೋರಿಸಿದ್ದಾರೆ.
ರಂಗನಾಯಕಿ ಖ್ಯಾತಿಯ ತ್ರಿವಿಕ್ರಮ ಸಾಮ್ರಾಟ್ ಈ ಚಿತ್ರದಲ್ಲಿ ವಿಕ್ಕಿ ಮಾರ್ಟಿನ್ ಹೆಸರಿನ ಹುಡುಗ ಹಾಗೂ ಮಂತ್ರವಾದಿಯ ಮಗನಾಗಿ ನಟಿಸಿದ್ದು, ಆರಂಭದಲ್ಲಿ ಕಾಲೆಜ್ ಹುಡುಗನಾಗಿ ನಂತರ ಮಂತ್ರವಾದಿಯ ಗೆಟಪ್ ನಲ್ಲಿ ಉತ್ತಮ ಅಭಿನಯ ನೀಡಿದ್ದಾರೆ.
ನಾಯಕಿ ನಿಶಾ ಪಾತ್ರದಲ್ಲಿ ಡಯಾನ ತೆರೆಮೇಲೆ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಸ್ತಿಯ ಆಸೆಗಾಗಿ ತಂದೆ ಮಾಡಿದ ತಪ್ಪಿನಿಂದ ಶಿಕ್ಷೆ ಅನುಭವಿಸುವ ಮಗಳಾಗಿ ಅವರ ಪಾತ್ರ ನೆನಪಲ್ಲುಳಿಯುತ್ತದೆ. ನಿರ್ದೇಶಕ ಅಶೋಕ್ ಒಬ್ಬ ಮಂತ್ರವಾದಿಯಾಗಿ ಗಮನ ಸೆಳೆಯುವ ಪಾತ್ರ ನಿರ್ವಹಿಸಿದ್ದಾರೆ. ಗಣೇಶ್ ಗೋವಿಂದಸ್ವಾಮಿ ಅವರ ಸಂಗೀತ ಉತ್ತಮವಾಗಿದೆ. ಬ್ಯಾಕ್ ಗ್ರೌಂಡ್ ಸ್ಕೋರ್ ಕೂಡ ಪರಿಣಾಮಕಾರಿಯಾಗಿದೆ. ವಿಶೇಷವಾಗಿ ಈ ಚಿತ್ರದಲ್ಲಿ ಮಂಗಳಮುಖಿಯನ್ನು ದೇವರ ಆರಾಧಕರಾಗಿ ತೋರಿಸಿದ್ದಾರೆ.